ರಾಮಕೃಷ್ಣ ಮಂದಾರ್ತಿಯವರದ್ದು ಸಾಹಿತ್ಯ ಶುದ್ಧತೆಯ ವಾದನ ಶೈಲಿ : ಎಸ್. ವಿ. ಉದಯಕುಮಾರ ಶೆಟ್ಟಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಏಪ್ರಿಲ್ 15 , 2016
|
ಎಪ್ರಿಲ್ 15 , 2016
|
ರಾಮಕೃಷ್ಣ ಮಂದಾರ್ತಿಯವರದ್ದು ಸಾಹಿತ್ಯ ಶುದ್ಧತೆಯ ವಾದನ ಶೈಲಿ : ಎಸ್. ವಿ. ಉದಯಕುಮಾರ ಶೆಟ್ಟಿ
ಕುಂಬಾಶಿ :
“ಪದ್ಯದ ಸಾಹಿತ್ಯಕ್ಕೆ ಭಂಗಬರದ ರೀತಿಯಲ್ಲಿ ಮೃದುವಾದ ನುಡಿತದ, ಛಂದಸ್ಸಿಕ್ಕಣುಗುಣವಾದ ವಾದನ ಶೈಲಿಯನ್ನು ಮೈಗೂಡಿಸಿಕೊಂಡ ರಾಮಕೃಷ್ಣ ಮಂದಾರ್ತಿಯವರು ಚೆಂಡೆಯ ಮಾಂತ್ರಿಕ ಕೆಮ್ಮಣ್ಣು ಆನಂದರ ಉತ್ತರಾಧಿಕಾರಿಯಾಗಿ ಗುರುತಿಸಿ ಕೊಂಡವರು. ಭಾರತೀಯ ಸಂಗೀತ ಉಪಕರಣಗಳಲ್ಲಿ ಚೆಂಡೆಯು ಸ್ವತಂತ್ರ ವಾದನೋಪಕರಣವಾಗಿರದೆ, ಮದ್ದಳೆಯ ಗುಂಪು ಛಾಪಿನೊಂದಿಗೆ ಚೆಂಡೆಯ ನಾದ ಸೇರಿಕೊಂಡಾಗ ಮಾತ್ರ ಕರ್ಣಾನಂದಕರವಾದ ನಾದ ಹೊರಹೊಮ್ಮುತ್ತದೆ ಎಂಬ ಸೂಕ್ಷ್ಮ ಅರಿತ ಇವರ ವಾದನ ಶೈಲಿ ಇಂದಿನ ಕಿರಿಯ ಕಲಾವಿದರಿಗೆ ಅನುಕರಣೆಯೋಗ್ಯ ಎಂದು ಮಣಿಪಾಲ ಎಂ. ಐ. ಟಿ. ಪ್ರಾಧ್ಯಾಪಕ ಎಸ್. ವಿ. ಉದಯಕುಮಾರ ಶೆಟ್ಟಿಯವರು ಅಭಿಪ್ರಾಯಪಟ್ಟರು.
ಅವರು ಕುಂಬಾಶಿಯಲ್ಲಿ ಹಾಕಿದ ಶ್ರೀ ಸಾಲಿಗ್ರಾಮ ಮೇಳದ ವೇದಿಕೆಯಲ್ಲಿ ಹಿರಿಯ ಚೆಂಡೆವಾದಕ ರಾಮಕೃಷ್ಣ ಮಂದಾರ್ತಿಯವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಸಾಲಿಗ್ರಾಮ ಮೇಳದ ವ್ಯವಸ್ಥಾಪಕ ಕಿಷನ್ ಹೆಗ್ಡೆಯವರು ಮಾತನಾಡಿ ರಾಮಕೃಷ್ಣ ಮಂದಾರ್ತಿಯವರು ಚೆಂಡೆವಾದನದಲ್ಲಿ ಶಿಷ್ಯರನ್ನು ಅಣಿಗೊಳಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ ಕೋಟ ಗೀತಾನಂದ ಪೌಂಡೇಷನ್ ಅದ್ಯಕ್ಷ ಆನಂದ ಸಿ. ಕುಂದರ್ ಅವರು ಮಂದಾರ್ತಿಯವರನ್ನು ಪಲಪುಷ್ಫ ಅರ್ಪಿಸಿ ಸ್ಮರಣಿಕೆ ಸನ್ಮಾನ ಪತ್ರ ಅರ್ಪಿಸಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಕುಂಬಾಶಿ ಗ್ರಾಮ ಪಂಚಾಯತ್ ಅದ್ಯಕ್ಷೆ ಶ್ರೀಮತಿ ವಾಣಿ ಅಡಿಗ, ಉದ್ಯಮಿ ಶಂಕರ ಶೆಟ್ಟಿ ಬೆಂಗಳೂರು, ಮೊಗವೀರ ಸಂಘ ಬೆಂಗಳೂರು ಅದ್ಯಕ ಬಿ. ಎನ್. ನರಸಿಂಹ, ಉಡುಪಿ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಗಣೇಶ ಕಾಂಚನ್, ಉದ್ಯಮಿ ಆನಗಳ್ಳಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಘಟಕ ಬೆಂಗಳೂರಿನ ಉದ್ಯಮಿ ಸುದಾಕರ ಭಂಗೇರ ಸ್ವಾಗತಿಸಿದರು. ಶಿವರಾಮ ಅಮೀನ್ ಕೋಟ ಕಾರ್ಯಕ್ರಮ ಸಂಯ್ಯೋಜಿಸಿ ವಂದಿಸಿದರು. ಬಳಿಕ ಸಾಲಿಗ್ರಾಮ ಮೇಳದವರಿಂದ ವಜ್ರಮಾನಸಿ ಎಂಬ ಆಖ್ಯಾನದ ಪ್ರದರ್ಶನ ನೆರವೇರಿತು.
|
|
|